ವಿಭಿನ್ನ ಕಥೆಯ "ಕ್ಯಾಪಿಟಲ್ ಸಿಟಿ" ಚಿತ್ರಕ್ಕೆ ಮುಹೂರ್ತ.
ವಿಭಿನ್ನ ಕಥೆಯ "ಕ್ಯಾಪಿಟಲ್ ಸಿಟಿ" ಚಿತ್ರಕ್ಕೆ ಮುಹೂರ್ತ.
![Kannada new film](/sites/default/files/inline-images/IMG-20211223-WA0036.jpg)
ಕನ್ನಡದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಆರ್.ಅನಂತರಾಜು ನಿರ್ದೇಶನದ ಹನ್ನೊಂದನೇ ಚಿತ್ರ ’ಕ್ಯಾಪಿಟಲ್ ಸಿಟಿ’. ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ’ಏಲಾ ಎಸ್ಟೇಟ್’ ನಲ್ಲಿ ನಡೆಯಿತು. ಮೊದಲ ದೃಶ್ಯಕ್ಕೆ ಹಿರಿಯ ನಿರ್ಮಾಪಕ ಕೆ.ಮಂಜು ಕ್ಲಾಪ್ ಮಾಡಿದರೆ, ಐಎಂಎಫ್ಎ ಸಂಸ್ಥೆಯ ದಿಲೀಪ್ ಕ್ಯಾಮಾರಾ ಸ್ವಿಚ್ ಆನ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. ಇನ್ಫಿನಿಟಿ ಕ್ರಿಯೇಷನ್ಸ್ ಅಡಿಯಲ್ಲಿ 23 ಜನ ಸ್ನೇಹಿತರು ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಇದರಲ್ಲಿ ಎಂಟು ಮಂದಿ ಬಣ್ಣ ಹಚ್ಚುತ್ತಿದ್ದಾರೆ. ಕರ್ನಾಟಕದ ರಾಜಧಾನಿ ಬೆಂಗಳೂರು. ಇಲ್ಲಿ ನಡೆಯುವ ಭೂಗತ ಲೋಕದ ಚಟುವಟಿಕೆಗಳು, ನಾಯಕ ಮತ್ತು ಖಳನಾಯಕನ ದ್ವೇಷದ ಕಥೆಯಾಗಿರುತ್ತದೆ. ಜೊತೆಗೆ ಹಾಸ್ಯ ಸನ್ನಿವೇಶಗಳು, ಸುಂದರ ಲವ್ ಟ್ರ್ಯಾಕ್ ಸಹ ಇರಲಿದೆ. ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇ ಬೇಕು. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎನ್ನುವ ಹಾಗೆ, ಮಹಾಭಾರತದಲ್ಲಿ ತಪ್ಪು ನಡೆಯುತ್ತಿರುವಾಗ ಕೃಷ್ಣ ಬರುವಂತೆ, ಆಧುನಿಕ ಯುಗದಲ್ಲಿ ತಪ್ಪುಗಳು ನಡೆಯುವಾಗ ನಾಯಕನ ಆಗಮನವಾಗುತ್ತದೆ. ಅದು ಏನೆಂಬುದನ್ನು ಸಿನಿಮಾದಲ್ಲಿ ನೋಡಬೇಕು ಎನ್ನುತ್ತಾರೆ ನಿರ್ದೇಶಕರು.
![Kannada new film](/sites/default/files/inline-images/IMG-20211223-WA0035.jpg)
ಇದಕ್ಕೆ ತಕ್ಕಂತೆ ’ಕರ್ಮ ಯಾಸ್ ನೋ ಡೆಡ್ಲೈನ್’ ಎಂದು ಅಡಿಬರಹದಲ್ಲಿದೆ. ಈ ಹಿಂದೆ ಮೂರು ಚಿತ್ರಗಳಲ್ಲಿ ನಟಿಸಿರುವ ರಾಜೀವ್ ಈ ಚಿತ್ರದ ನಾಯಕ. ರಾಜೀವ್ ಅವರಿಗೆ ನಿರ್ದೇಶಕರು ಈ ಚಿತ್ರದಿಂದ ರಗಡ್ ಸ್ಟಾರ್ ಎಂಬ ಬಿರುದು ನೀಡಿದ್ದಾರೆ. ಇವರ ಪಾತ್ರ ಏನೆಂಬುದು ವಿರಾಮದ ನಂತರ ತಿಳಿಯುತ್ತದೆ. ಕೃತಿಕಾ ನಾಯಕಿ. ಆಕೆಯದು ಚಿತ್ರದಲ್ಲಿ ಮುಗ್ಧ ಹುಡುಗಿ ಪಾತ್ರ. ಡಾನ್ ಪಾತ್ರದಲ್ಲಿ ರವಿಶಂಕರ್, ಎಸಿಪಿಯಾಗಿ ಶರತ್ಲೋಹಿತಾಶ್ವ, ಶಾಸಕರಾಗಿ ಶ್ರೀಧರ್ ಕಾಣಿಸಿಕೊಳ್ಳಲಿದ್ದಾರೆ, ನಗಿಸಲು ಮುನಿರಾಜು-ರಿತೇಶ್ ಇದ್ದಾರೆ. ರಾಮ್ನಾರಾಯಣ್ ಬರೆದಿರುವ ನಾಲ್ಕು ಹಾಡುಗಳಿಗೆ ನಾಗು.ಎಸ್ ಸಂಗೀತ ಸಂಯೋಜಿಸುತ್ತಿದ್ದಾರೆ.
ದೀಪು ಎಸ್ ಛಾಯಾಗ್ರಹಣ, ಕಿಶೋರ್ ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಈಶ್ವರ್ ಸಂಕಲನ ಹಾಗೂ ರಮೇಶ್ ದೇಸಾಯಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ. ಹಾಡಿನ ಚಿತ್ರೀಕರಣ ಬೇರೆ ಕಡೆ ಚಿತ್ರಿಸುವ ಯೋಚನೆಯಿದೆ ಎನ್ನುತ್ತಾರೆ ನಿರ್ದೇಶಕರು.
Recent comments