ಶ್ರೀ ಜಗನ್ನಾಥದಾಸರು ಸಂಭ್ರಮದ ಸುವರ್ಣ ದಿನೋತ್ಸವ
ಶ್ರೀ ಜಗನ್ನಾಥದಾಸರು ಸಂಭ್ರಮದ ಸುವರ್ಣ ದಿನೋತ್ಸವ.
ಕಳೆದ ಭಾನುವಾರ, ಸಂಜೆ ಬೆಂಗಳೂರಿನ ಬಸವನಗುಡಿಯ, ಉತ್ತರಾಧಿಮಠದ ಎರಡನೇ ಮಹಡಿಯ ಸಭಾಂಗಣದಲ್ಲಿ ಸಂಭ್ರಮವೋ ಸಂಭ್ರಮ. ದೇವರು ಮತ್ತು ಗುರುಗಳು ಹಾಗೂ ಪುರಂದರದಾಸರು ಪೂಜೆಗೊಳ್ಳುವ ಆ ಸಾನಿಧ್ಯದಲ್ಲಿ "ಶ್ರೀ ಜಗನ್ನಾಥದಾಸರು" ಚಲನಚಿತ್ರದ ಯಶಸ್ವಿ ಐವತ್ತನೇ ದಿನದ ಸಮಾರಂಭ ನಡೆದದ್ದು ಅತ್ಯಂತ ವಿಶೇಷವು ಮತ್ತು ಔಚಿತ್ಯಪೂರ್ಣವೂ ಅಗಿತ್ತು. "ಹರಿಕಥಾಮೃತಸಾರ" ದಂತಹ ಮೇರುಕೃತಿಯನ್ನು ನೀಡಿದ ದಾಸಶ್ರೇಷ್ಟರಲ್ಲೊಬ್ಬರಾದ ಶ್ರೀ ಜಗನ್ನಾಥದಾಸರ ಕುರಿತಾದ ಚಲನಚಿತ್ರ ತನ್ನ ಚಿತ್ರೀಕರಣವನ್ನು ಕಳೆದ ವರ್ಷಾರಂಭದಲ್ಲಿ ಆರಂಭಿಸಿದ್ದು ಮಂತ್ರಾಲಯದಲ್ಲಿ, ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ, ಮಂತ್ರಾಲಯಮಠದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರತೀರ್ಥರ ಆಶೀರ್ವಚನ ಮತ್ತು ಕ್ಯಾಮರಾ ಚಾಲನೆಯೊಂದಿಗೆ ನಡೆಯಿತು.
ಈ ವರ್ಷದ ಆರಂಭದಲ್ಲಿ ಚಿತ್ರದ ಯಶಸ್ಸಿನ ಸಮಾರಂಭ ಬೆಂಗಳೂರಿನ ಉತ್ತರಾಧಿಮಠದಲ್ಲಿ ಶ್ರೀ ಜಯತೀರ್ಥರ ವೃಂದಾವನವಿರುವ ಸನ್ನಿಧಾನದಲ್ಲಿ ನಡೆದಿದೆ. ಇಂತಹ ದೈವೀಕ ಸಾಂಗತ್ಯ ಮೊದಲಿನಿಂದಲೂ ಈ ಚಿತ್ರಕ್ಕೆ ಒದಗಿ ಬರುತ್ತಿದೆ ಎಂಬುದನ್ನು ಚಿತ್ರತಂಡ ಈ ಸಂದರ್ಭದಲ್ಲಿ ನೆನೆಪಿಸಿಕೊಳ್ಳುತ್ತಿತ್ತು. ಐವತ್ತು ದಿನದ ಪ್ರದರ್ಶನದ ನಂತರವು "ಶ್ರೀ ಜಗನ್ನಾಥದಾಸರು" ಚಿತ್ರ ಬೆಂಗಳೂರಿನ ಐದು ಮಲ್ಟಿಪ್ಲೆಕ್ಸ್ಗಳಲ್ಲಿ ಮತ್ತು ರಾಜ್ಯದ ಹಲವು ಕಡೆ ಮುಂದುವರೆದಿರುವುದರಿಂದ, ಇದೇ ರೀತಿ ಚಿತ್ರದ ನೂರನೇ ದಿನದ ಸಮಾರಂಭದಲ್ಲಿ ತಾವೆಲ್ಲಾ ಹೀಗೆ ಪಾಲ್ಗೊಳ್ಳೋಣ ಎಂದು ಬಂದಿದ್ದ ಅತಿಥಿಗಳು ನುಡಿದು ಶುಭ ಹಾರೈಸಿದ್ದುಂಟು. ವಿದ್ವಾಂಸರಾದ ಶ್ರೀ ಸತ್ಯಧ್ಯಾನಾಚಾರ್ ಕಟ್ಟಿಯವರಿಂದ ಈ ರೀತಿಯ ಶುಭಹಾರೈಕೆ ಆರಂಭವಾಯಿತು. ಬಸವನಗುಡಿಯ ಶಾಸಕರಾದ ಶ್ರೀ ರವಿಸುಬ್ರಮಣ್ಯ, ಗಂಗಾವತಿ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ, ಅಧಮ್ಯ ಚೇತನದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಶ್ರೀ ಗಂಗಾವತಿ ಪ್ರಾಣೇಶ್, ಫಿಲಂ ಛೇಂಬರ್ ಉಪಾಧ್ಯಕ್ಷ ಶ್ರೀ ಉಮೇಶ್ ಬಣಕಾರ್, ಪ್ರಾಧ್ಯಾಪಕ ಡಾII ವಾಸುದೇವ ಅಗ್ನಿಹೋತ್ರಿ ಮತ್ತಿತರ ಗಣ್ಯ ಅತಿಥಿಗಳು ಮುಖ್ಯವಾಗಿ ವ್ಯಕ್ತಪಡಿಸಿದ ಅಭಿಪ್ರಾಯವೇನೆಂದರೆ, ನಮ್ಮ ಸಂಸ್ಕøತಿ, ಪರಂಪರೆ, ಮೌಲ್ಯಗಳ ಕುರಿತಂತೆ ಇಂದಿನ ಪೀಳಿಗೆಗೆ ಅರಿವನ್ನುಂಟು ಮಾಡುವಲ್ಲಿ ಶ್ರೀ ಜಗನ್ನಾಥದಾಸರ ಚಿತ್ರ ನಿರ್ಮಾಣವಾದದ್ದು, ಯಶಸ್ವಿಯಾದದ್ದು ಅತ್ಯಂತ ಮಹತ್ವ ಪಡೆದಿದೆ ಎನ್ನುವ ವಿಚಾರ. ಹಾಗೂ ಇಂತಹ ಚಿತ್ರಗಳ ಪರಂಪರೆ, ಯಶಸ್ಸು ಮುಂದುವರೆದು, ಈ ನಾಡಿನ ಮಹನೀಯರ ಬಗ್ಗೆ ಎಲ್ಲರೂ ತಿಳಿಯುವಂತಾಗಲಿ ಎಂಬುದು.
ಇನ್ನು ಚಿತ್ರ ತಂಡದ ಎಲ್ಲರನ್ನೂ ಸನ್ಮಾನಿಸಲಾಯಿತು. ಹಾಗೂ ತಂಡದ ಪರವಾಗಿ ನಿರ್ಮಾಪಕರು ಮತ್ತು ವಿಜಯದಾಸರ ಪಾತ್ರಧಾರಿಯೂ ಆಗಿರುವ ಶ್ರೀ ತ್ರಿವಿಕ್ರಮಜೋಷಿ ಮಾತನಾಡಿ ತಮ್ಮ ಚಿತ್ರಕ್ಕೆ ಸಿಕ್ಕ ಪ್ರೇಕ್ಷಕರ, ಗುರುಗಳ, ವಿದ್ವಾಂಸರ, ಹರಿದಾಸ ಭಜನಾ ಮಂಡಳಿಗಳ ಬೆಂಬಲವನ್ನು ಸ್ಮರಿಸಿದರು. ನಿರ್ದೇಶಕ ಮಧುಸೂದನ ಹವಲ್ದಾರ್ ಎಲ್ಲರಿಗೂ ವಂದನೆ ಅರ್ಪಿಸಿದರು.
Recent comments