2019ನನ್ನ ಪಾಲಿಗೆ ಅತ್ಯಂತ ಕೆಟ್ಟ ವರ್ಷ: ಸಂಜಯ್ ಮಂಜ್ರೇಕರ್
2019ನನ್ನ ಪಾಲಿಗೆ ಅತ್ಯಂತ ಕೆಟ್ಟ ವರ್ಷ: ಸಂಜಯ್ ಮಂಜ್ರೇಕರ್
ನವದೆಹಲಿ: ಪಂದ್ಯ ವಿಶ್ಲೇಷಕ ಹಾಗೂ ನಿರೂಪಕನಾಗಿ 2019 ನನ್ನ ಪಾಲಿಗೆ ಅತ್ಯಂತ ಕೆಟ್ಟ ವರ್ಷ ಎಂಬುದನ್ನು ನಾನು ನಂಬುತ್ತೇನೆ ಎಂದು ಭಾರತ ತಂಡದ ಮಾಜಿ ಬ್ಯಾಟ್ಸ್ಮನ್ ಸಂಜಯ್ ಮಂಜ್ರೇಕರ್ ವಿಮರ್ಶೆ ಮಾಡಿಕೊಂಡಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದ ಬಳಿಕ ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ರವೀಂದ್ರ ಜಡೇಜಾ ಸೇರ್ಪಡೆಯ ಸಾಧ್ಯತೆ ಕುರಿತಾಗಿ ಮಾತನಾಡುವ ಸಂದರ್ಭದಲ್ಲಿ ಮಂಜ್ರೆಕರ್ "ಚೂರು ಪಾರು ಆಟಗಾರ'' ಎಂದು ಕರೆದು ಸರ್ ಜಡೇಜಾ ಅವರ ಕೋಪಕ್ಕೆ ಗುರಿಯಾಗಿದ್ದರು. ಸಂಜಯ್ ಮಂಜ್ರೇಕರ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದೇ ವೇಳೆ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲಿನ ಪಂದ್ಯದಲ್ಲಿ ಜಡೇಜಾ ಸ್ಫೋಟಕ ಬ್ಯಾಟಿಂಗ್ ಮಾಡಿ ಅರ್ಧಶತಕ ಸಿಡಿಸಿದ್ದರು. ನಂತರ, ಟ್ವಿಟರ್ ಮೂಲಕ ತಿರುಗೇಟು ನೀಡಿದ್ದರು. "ನಿಮಗಿಂತಲೂ ನಾನು ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ, ಈಗಲೂ ಆಡುತ್ತಿದ್ದೇನೆ. ಸಾಧನೆ ಮಾಡಿರುವವರ ಬಗ್ಗೆ ಗೌರವವಿರಲಿ.
ಸಂಜಯ್ ಮಂಜ್ರೇಕರ್ ನಿಮ್ಮ ಮಾತಿನ ಭೇದಿ ಕೇಳಿ ಸಾಕಾಗಿದೆ,'' ಎಂದು ಖಾರವಾಗಿ ಟ್ವೀಟ್ ಮಾಡಿದ್ದರು. "1997-1998ರಲ್ಲಿಯೇ ವಿಶ್ಲೇಷಕ ಹಾಗೂ ನಿರೂಪಕನಾಗಿ ಮತ್ತೊಂದು ಇನಿಂಗ್ಸ್ ಆರಂಭಿಸಿದ್ದೆ. ಒಟ್ಟು 20 ರಿಂದ 21 ವರ್ಷಗಳ ಕಾಲ ಈ ವೃತ್ತಿ ನಿರ್ವಹಿಸಿದ್ದೇನೆ. ಆದರೆ, ಈ ವರ್ಷ ನನ್ನ ಪಾಲಿಗೆ ಅತ್ಯಂತ ಕೆಟ್ಟದಾಗಿತ್ತು," ಎಂದು ವಿಮರ್ಶೆ ಮಾಡಿಕೊಂಡಿದ್ದಾರೆ. ನವೆಂಬರ್ ನಂತರ, ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತದ ಮೊದಲ ಡೇ-ನೈಟ್ ಟೆಸ್ಟ್ನಲ್ಲಿ ಬಳಸಿದ ಗುಲಾಬಿ ಚೆಂಡಿನ ಗೋಚರತೆಯ ಬಗ್ಗೆ ಹರ್ಷ್ ಬೋಗ್ಲೆ ಅವರೊಂದಿಗೆ ಸಣ್ಣ ಮಾತಿನ ಚಕಮಕಿಗೂ ಮಂಜ್ರೇಕರ್ ಬಳಗಾಗಿದ್ದರು. "ನಾನು ಈ ಬಗ್ಗೆ ತುಂಬಾ ಗಂಭೀರವಾಗಿ ತಿಳಿದುಕೊಳ್ಳಲು ಬಯಸುತ್ತೇನೆ" ಎಂದು ಅವರು ಹೇಳಿದರು. ನಾನು ಕೆಲವೊಮ್ಮೆ ನಿಯಂತ್ರಣ ಕಳೆದುಕೊಂಡು ಮಾತನಾಡಿ ಬಿಡುತ್ತೇನೆ. ಇದು ಬೇರೆಯವರ ಮನಸಿಗೆ ನಾಟುತ್ತದ ಎಂಬ ಬಗ್ಗೆಯೂ ನನಗೆ ಅರಿವಾಗಲಿಲ್ಲ. ಇದರ ಬಗ್ಗೆ ಕ್ಷಮೆಯಾಚಿಸುತ್ತೇನೆ," ಎಂದು ಮಂಜ್ರೇಕರ್ ಹೇಳಿದ್ದಾರೆ.ಸಂಜಯ್ ಮಂಜ್ರೇಕರ್ ಅವರು 37 ಟೆಸ್ಟ್ ಹಾಗೂ 74 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
Recent comments