ಕುತೂಹಲಕಾರಿ ಕಥಾಹಂದರದ 'ಸ್ಕೇರಿ ಫಾರೆಸ್ಟ್' ಫೆಬ್ರವರಿಯಲ್ಲಿ ತೆರೆಗೆ.
ಕುತೂಹಲಕಾರಿ ಕಥಾಹಂದರದ 'ಸ್ಕೇರಿ ಫಾರೆಸ್ಟ್' ಫೆಬ್ರವರಿಯಲ್ಲಿ ತೆರೆಗೆ.
![Kannada new film](/sites/default/files/inline-images/IMG-20210130-WA0051.jpg)
ಕನ್ನಡದಲ್ಲಿ ಸಾಕಷ್ಟು ಹಾರಾರ್ ಕಥಾಹಂದರವಿರುವ ಚಿತ್ರಗಳು ಬಂದಿವೆ. ಆದರೆ ಎಲ್ಲಕಥೆಗಳಿಗಿಂತ ವಿಭಿನ್ನ ಕಥೆಯುಳ್ಳ 'ಸ್ಕೇರಿ ಫಾರೆಸ್ಟ್' ಚಿತ್ರ ಫೆಬ್ರವರಿ 26ರಂದು ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಪ್ರೀತಿ- ಭಯ- ಆತ್ಮ ಎಂಬ ಅಡಿಬರಹವಿದೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಸ್ನೇಹಿತ - ಸ್ನೇಹಿತೆಯರು ಸಂಶೋಧನೆಗಾಗಿ ಕಾಡಿಗೆ ತೆರಳುತ್ತಾರೆ.
ಆಗ ಆ ಕಾಡಿನಲ್ಲಿ ಏನೆಲ್ಲಾ ನಡೆಯುತ್ತದೆ? ಎನ್ನುವುದು ಈ ಚಿತ್ರದ ಕಥಾವಸ್ತು. ಮೂಲತಃ ತುಮಕೂರಿನ ಮಾರಶೆಟ್ಟಿ ಹಳ್ಳಿಯವರಾದ ಜಯಪ್ರಭು ಆರ್ ಲಿಂಗಾಯಿತ್ ಈಗ ಮುಂಬೈನಲ್ಲಿ ನೆಲೆಸಿದ್ದಾರೆ.
![Kannada new film](/sites/default/files/inline-images/IMG-20210130-WA0054.jpg)
ಅವರೆ ಈ ಚಿತ್ರದ ನಿರ್ಮಾಪಕರು.
ಮುಂಬೈನಲ್ಲಿ ವಾಸವಿದ್ದರೂ ನನಗೆ ಕನ್ನಡದ ಬಗ್ಗೆ ಅಪಾರ ಪ್ರೇಮ ಹಾಗೂ ವರನಟ ಡಾ||ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಅವರ ಅಭಿನಯದ ಚಿತ್ರಗಳೇ ನನಗೆ ಚಿತ್ರ ನಿರ್ಮಾಣಕ್ಕೆ ಸ್ಪೂರ್ತಿ ಎನ್ನುತ್ತಾರೆ ಜಯಪ್ರಭು. ಕರ್ನಾಟಕ ಹಾಗೂ ಮುಂಬೈನಲ್ಲಿ ನಾಲ್ಕೈದು ವಿವಿಧ ಕಾರ್ಖಾನೆ ಹೊಂದಿರುವ ಜಯಪ್ರಭು ಅವರು, ಸುಮಾರು ಇನ್ನೂರರಿಂದ ಮುನ್ನೂರು ಕಾರ್ಮಿಕರಿಗೆ ಆಸರೆಯಾಗಿದ್ದಾರೆ. ನಮ್ಮ ಸಂಪಾದನೆ ಸದ್ವಿನಿಯೋಗ ಆಗಬೇಕೆಂಬ ಉದ್ದೇಶ ಜಯಪ್ರಭು ಅವರದು. ಈಗಾಗಲೇ ಸಾಕಷ್ಟು ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಟ್ರಸ್ಟೊಂದನ್ನು ಸ್ಥಾಪಿಸಿ ಸ್ಥಾಪಿಸಿ ಇನ್ನೂ ದೊಡ್ಡಮಟ್ಟದ ಸಮಾಜಮುಖಿ ಕಾರ್ಯಗಳನ್ನು ನಡೆಸಲು ಮುಂದಾಗಿದ್ದಾರೆ.
ಇದರಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಹಾಗೂ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದೇ ಪ್ರಮುಖ ಎನ್ನುತ್ತಾರೆ ಅವರು. ಸ್ನೇಹಿತರೊಬ್ಬರು ಹಿಂದಿ ಚಿತ್ರ ನಿರ್ಮಾಣಕ್ಕೆ ಹಣ ಹೂಡಲು ಕೇಳಿದಾಗ ಕನ್ನಡದಲ್ಲಿಯೂ ನಿರ್ಮಾಣ ಮಾಡಿದರೆ ಮಾತ್ರ ಹಣ ಹೂಡುವುದಾಗಿ ಹೇಳಿದ್ದಾರೆ ಜಯಪ್ರಭು. ಚಿತ್ರದ ತಾಂತ್ರಿಕ ವರ್ಗದಲ್ಲೂ ಹೆಚ್ಚಿನ ಪಾಲು ಕನ್ನಡಿಗರಿಗೆ ನೀಡಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಬಾಲಿವುಡ್ ನಲ್ಲಿ ಅನುಭವ ಹೊಂದಿರುವ ಸಂಜಯ್ ಅಭೀರ್ ನಿರ್ದೇಶಿಸಿದ್ದಾರೆ.
![Kannada new film](/sites/default/files/inline-images/IMG-20210130-WA0055.jpg)
ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಕನ್ನಡದ ಯುವ ಪ್ರತಿಭೆ ಆದಿ ಹಾಗೂ ಎಲ್.ಕೆ.ಲಕ್ಷ್ಮೀಕಾಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಲಕ್ಷ್ಮೀಕಾಂತ್ ಅವರದು. ಹಾಲಿವುಡ್ ನ ಜಂಗಲ್ ಬುಕ್ 1994, ಹಿಂದಿಯ ರಾಗಿಣಿ ಎಂ.ಎಂ.ಎಸ್ ೨ ಸೇರಿದಂತೆ ಮುಂತಾದ ಹೆಸರಾಂತ ಚಿತ್ರಗಳ ಛಾಯಾಗ್ರಾಹಕರಾದ ನರೇನ್ ಗೇಡಿಯಾ ಅವರ ಛಾಯಾಗ್ರಹಣ, ರಾಜೇಶ್ ಶಾ ಸಂಕಲನ ಹಾಗೂ ದೀಪಕ್ ಶರ್ಮ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಕುತೂಹಲಕಾರಿ ಕಥೆಯೊಂದಿಗೆ ಟ್ರಯಾಂಗಲ್ ಲವ್ ಸ್ಟೋರಿ ಸಹ ಈ ಚಿತ್ರದಲ್ಲಿದೆ. ನಿರ್ಮಾಪಕ ಜಯಪ್ರಭು ಸಹ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ಜೀತ್ ರಾಯ್ದತ್ ಈ ಚಿತ್ರದ ದ್ವಿತೀಯ ನಾಯಕ. ಬಹುಭಾಷ ನಟ ಯಶ್ ಪಾಲ್ ಶರ್ಮ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಕೊಡಗಿನ ಟೀನಾ ಪೊನ್ನಪ್ಪ, ಆಮ್ ರೀನ್, ಕಲ್ಪನ ಈ ಚಿತ್ರದ ನಾಯಕಿಯರು. ಅಷ್ಟೇ ಅಲ್ಲದೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ನಿರ್ಮಾಪಕರ ಪುತ್ರಿ ಬೇಬಿ ಪೂಜಾ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ.
![Kannada new film](/sites/default/files/inline-images/IMG-20210130-WA0054_0.jpg)
ತುಮಕೂರಿನ ಸಿದ್ದಗಂಗಾ ಮಠದ ಲಿಂಗಕ್ಯ ಶ್ರೀ ಶಿವಕುಮಾರ ಸ್ವಾಮಿಗಳ ಹಾಗೂ ಶ್ರೀ ಸಿದ್ಧಲಿಂಗ ಸ್ವಾಮಿಗಳ ಆಶೀರ್ವಾದದಿಂದ ೨೦೧೯ರ ಡಿಸೆಂಬರ್ ನಲ್ಲಿ ಈ ಚಿತ್ರ ಆರಂಭವಾಗಿತ್ತು. ಸನ್ಮಾನ್ಯ ಸಚಿವರಾದ ಮಾದುಸ್ವಾಮಿ ಅವರು ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ಸಿದ್ದಗಂಗಾ ಮಠದ ಆವರಣ, ತುಮಕೂರು, ಚಿಕ್ಕಮಗಳೂರು ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆದಿದೆ. .
Recent comments