ಹಲವು ನೆನಪುಗಳಿಗೆ ಸಾಕ್ಷಿಯಾಯಿತು "ಗಾಳಿಪಟ 2" ಚಿತ್ರದ ಸುಂದರ ಸಂಜೆ.
ಹಲವು ನೆನಪುಗಳಿಗೆ ಸಾಕ್ಷಿಯಾಯಿತು "ಗಾಳಿಪಟ 2" ಚಿತ್ರದ ಸುಂದರ ಸಂಜೆ.
*ಪರೀಕ್ಷೆ ಹಾಡಿನ ಬಿಡುಗಡೆಯೊಂದಿಗೆ ಚಿತ್ರದ ಪ್ರಚಾರಕ್ಕೆ ಚಾಲನೆ.*
ವರ್ಷಗಳು ಹೇಗೆ ಕಳೆಯುತ್ತಿದೆಯೋ? ಗೊತ್ತಾಗುತ್ತಿಲ್ಲ. ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಬಂದಿದ್ದ "ಗಾಳಿಪಟ" ಬಂದು ಹದಿನಾಲ್ಕು ವರ್ಷಗಳೇ ಕಳೆದಿದೆ. ಈಗ ಅದರ ಭಾಗ ೨ ತೆರೆಗೆ ಬರಲು ಸಿದ್ದವಾಗಿದೆ. ಈ ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು ಬರೆದಿರುವ ಪರೀಕ್ಷೆ ಕುರಿತಾದ ಗೀತೆಯೊಂದರ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. "ಗಾಳಿಪಟ ೨" ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ಅನುಭವಗಳನ್ನು ಆ ಸುಂದರ ಸಂಜೆಯಲ್ಲಿ ಹಂಚಿಕೊಂಡರು. "ಗಾಳಿಪಟ ೨" ಆರಂಭವಾಗಿದ್ದೆ ಒಂದು ಸೋಜಿಗ. ನನಗೆ ಯೋಗರಾಜ್ ಭಟ್ ಅವರೇನು ಪರಿಚಯವಿರಲಿಲ್ಲ.
ನಾನು ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಅಮ್ಮನವರೊಂದಿಗೆ ತಿರುಪತಿಯಿಂದ ದರ್ಶನ ಮುಗಿಸಿ ಬರಬೇಕಾದರೆ ಸುಧಾ ಅಮ್ಮ ಅವರಿಗೆ ಯೋಗರಾಜ್ ಸರ್ ಫೋನ್ ಮಾಡಿದ್ದರು. ನಂತರ ಸುಧಾ ಅಮ್ಮ ಅವರು ನನಗೆ ಯೋಗರಾಜ್ ಭಟ್ "ಗಾಳಿಪಟ 2" ಚಿತ್ರದ ಕಥೆ ಸಿದ್ದಮಾಡಿಕೊಂಡಿದ್ದಾರೆ. ನೀವು ಸಾಧ್ಯವಾದರೆ ನಿರ್ಮಾಣ ಮಾಡಿ ಎಂದರು. ಅಮ್ಮನ ಮಾತಿಗೆ ಎಂದು ನಾನು ಆಗಲ್ಲ ಎಂದಿಲ್ಲ. ಸರಿ ಅಂದೆ.
ನಂತರ "ಗಾಳಿಪಟ ೨" ಆರಂಭವಾಯಿತು. ಇನ್ನೂ ಪರೀಕ್ಷೆ ಬಗ್ಗೆ ಹೇಳಬೇಕೆಂದರೆ ನಾನು ಈಗಾಗಲೇ ನಾಲ್ಕು ಪರೀಕ್ಷೆಯಲ್ಲಿ ಫೇಲ್ ಆಗಿದ್ದೀನಿ. ಐದನೇ ಪರೀಕ್ಷೆ ಬರೆದಿದ್ದೇನೆ. ನೀವೆಲ್ಲಾ ಸೇರಿ ಪಾಸ್ ಮಾಡಿಸಿ ಅಂದರು ನಿರ್ಮಾಪಕ ರಮೇಶ್ ರೆಡ್ಡಿ. ಯೋಗರಾಜ್ ಭಟ್ ಅವರ ಕನಸು ನನಸಾಗಲು ಸುಧಾಮೂರ್ತಿ ಅವರು ಕಾರಣ. ಭಟ್ ಅವರಿಗೆ ಸುಧಾಮೂರ್ತಿ ಗಾಡ್ ಮದರ್ ಅಂದರೆ ತಪ್ಪಾಗಲಾರದು. "ಗಾಳಿಪಟ" ದಲ್ಲೂ ನಟಿಸಿದ್ದೆ. ಈಗ ಇದರಲ್ಲೂ ನಟಿಸಿದ್ದೇನೆ. ಉತ್ತಮ ಚಿತ್ರ ಒಳ್ಳೆಯದಾಗಲಿ ಎಂದರು ಹಿರಿಯ ನಟ ಅನಂತನಾಗ್. ಹೌದು ಅನಂತ್ ಸರ್ ಹೇಳಿದ ಹಾಗೆ, ಸುಧಾಮೂರ್ತಿ ಅವರು ನನ್ನ ಗಾಡ್ ಮದರ್ . ಅವರಿಂದಲೇ ರಮೇಶ್ ರೆಡ್ಡಿ ಅವರ ಪರಿಚಯವಾಗಿದ್ದು, "ಗಾಳಿಪಟ ೨" ಪ್ರಾರಂಭವಾಗಿದ್ದು. ಇನ್ನೂ ಈ ಚಿತ್ರದ ಬಗ್ಗೆ ಹೇಳಬೇಕೆಂದರೆ ಈಗ ಎಲ್ಲಾ ಕಾರ್ಯ ಪೂರ್ಣವಾಗಿ, ಬಿಡುಗಡೆಗೆ ಸಿದ್ದವಾಗಿದೆ. ಈಗ ಪರೀಕ್ಷೆ ಹಾಡನ್ನು ಬಿಡುಗಡೆ ಮಾಡಿದ್ದೀವಿ. ಬಿಡುಗಡೆಯಾದ ಸ್ವಲ್ಪ ಹೊತ್ತಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತದೆ. ಇನ್ನೂ "ಗಾಳಿಪಟ" ದಲ್ಲಿದ್ದ ಗಣೇಶ್, ದಿಗಂತ್, ಅನಂತ್ ನಾಗ್, ಸುಧಾ ಬೆಳವಾಡಿ, ರಂಗಾಯಣ ರಘು, ಪದ್ಮಜಾರಾವ್ ಭಾಗ ೨ ರಲ್ಲೂ ಇದ್ದಾರೆ. ಮಿತ್ರ ಪವನ್ ಕುಮಾರ್ ಇದರಲ್ಲಿ ಅಭಿನಯಿಸಿದ್ದಾರೆ. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ನಿಶ್ವಿಕಾ ನಾಯ್ಡು, ಕೇರಳ ಮೂಲದ ಸಂಯುಕ್ತ, ರಂಗಾಯ ರಘು ಸುಧಾ ಬೆಳವಾಡಿ, ಪದ್ಮಜಾರಾವ್, ಬುಲೆಟ್ ಪ್ರಕಾಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಅರ್ಜುನ್ ಜನ್ಯ ಸಂಗೀತ ನಮ್ಮ ಚಿತ್ರದ ಅಂದವನ್ನು ಹೆಚ್ಚಿಸಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಸೊಗಸಾಗಿದೆ. ಇಡೀ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ "ಗಾಳಿಪಟ ೨" ಚೆನ್ನಾಗಿ ಮೂಡಿಬಂದಿದೆ. ಇನ್ನು ಮುಂದೆ ನಿಮ್ಮ ಹಾಗೂ ಪ್ರೇಕ್ಷಕರ ಪ್ರೋತ್ಸಾಹ ಮುಖ್ಯ ಎಂದರು ಯೋಗರಾಜ್ ಭಟ್. "ಗಾಳಿಪಟ" ಎಂದರೆ ನನಗೆ ಎಮೋಷನ್. ಯೋಗರಾಜ್ ಸರ್ ಕಥೆ ಹೇಳಿದಾಗ, ಸಾಕಷ್ಟು ಕುತೂಹಲ ಹುಟ್ಟಿಸಿತು. ಅನಂತ್ ಸರ್ ಜೊತೆ ನಟಿಸುವುದೇ ಒಂದು ಖುಷಿ. ಕುದುರೆಮುಖದ ಕಾಲೇಜ್ ಸೆಟ್ ನಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಜನರೊಂದಿಗೆ ನಟಿಸಿದ್ದು, ಈಗಲೂ ಮರೆಯುವ ಹಾಗಿಲ್ಲ. ರಂಗಾಯಣ ರಘು ಸರ್ ಅದರಲ್ಲೂ, ಇದರಲ್ಲೂ ನನಗೆ ಅಪ್ಪ. ದಿಗಂತ್, ಪವನ್, ಶರ್ಮಿಳಾ, ವೈಭವಿ, ನಿಶ್ವಿಕಾ ಎಲ್ಲರ ಅಭಿನಯವೂ ಚೆಂದ. ನಮ್ಮ "ಗಾಳಿಪಟ" ಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಗಣೇಶ್. "ಗಾಳಿಪಟ" ನನಗೆ ಮರೆಯಲಾಗದ್ದ ಚಿತ್ರ. ಅಲ್ಲಿಂದಲೇ ನನ್ನ ವೃತ್ತಿ ಜೀವನ ಶುರುವಾಗಿದು. ಯೋಗರಾಜ್ ಸರ್ ನನಗೆ ಅಪ್ಪ, ಚಿಕ್ಕಪ್ಪ, ಮಿತ್ರ ಇತ್ಯಾದಿ. ಅವರ ಸಹಕಾರ ಅಪಾರ. "ಗಾಳಿಪಟ ೨" ಕೂಡ ಚೆನ್ನಾಗಿದೆ ಎಂದರು ದಿಗಂತ್. ಪವನ್ ಕುಮಾರ್ ಸಹ "ಗಾಳಿಪಟ ೨ " ಬಗ್ಗೆ ಅನುಭವ ಹಂಚಿಕೊಂಡರು. ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ಪದ್ಮಜಾರಾವ್, ಛಾಯಾಗ್ರಹಕ ಸಂತೋಷ್ ರೈ ಪಾತಾಜೆ ಹಾಗೂ ಸಾಹಿತಿ ಜಯಂತ ಕಾಯ್ಕಿಣಿ ಚಿತ್ರದ ಕುರಿತು ಮಾತನಾಡಿದರು.
Recent comments