ಅರಮನೆ ನಗರದಲ್ಲಿ ಆರಂಭವಾಯಿತು ಅದಿತಿ ಪ್ರಭುದೇವ - ಪವನ್ ತೇಜ್ ಅಭಿನಯದ ನೂತನ ಚಿತ್ರ.
ಅರಮನೆ ನಗರದಲ್ಲಿ ಆರಂಭವಾಯಿತು ಅದಿತಿ ಪ್ರಭುದೇವ - ಪವನ್ ತೇಜ್ ಅಭಿನಯದ ನೂತನ ಚಿತ್ರ.
ಜೀವ ನಿರ್ದೇಶನದ ಈ ಚಿತ್ರಕ್ಕೆ ವಿ.ಚಂದ್ರು ನಿರ್ಮಾಣ.
ಕೊರೋನ ಹಾವಳಿಯ ನಂತರ ಚಿತ್ರರಂಗದ ವೈಭವ ಮರುಕಳಿಸುತ್ತದೆ. ಅರಮನೆ ನಗರ ಮೈಸೂರಿನ ಕೋಟೆ ವಿನಾಯಕ ದೇವಸ್ಥಾನದಲ್ಲಿ ಇತ್ತೀಚೆಗೆ ನೂತನ ಚಿತ್ರವೊಂದರ ಮುಹೂರ್ತ ಸಮಾರಂಭ ನೆರವೇರಿತು. ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ನಾಯಕ - ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರವನ್ನು ಉದ್ಯಮಿ ವಿ.ಚಂದ್ರು ನಿರ್ಮಿಸುತ್ತಿದ್ದಾರೆ.
ಜೀವ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮೊದಲ ದೃಶ್ಯಕ್ಕೆ ನಿರ್ಮಾಪಕ ವಿ.ಚಂದ್ರು ಆರಂಭ ಫಲಕ ತೋರಿದರು. ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅವರು ಕ್ಯಾಮೆರಾ ಚಾಲನೆ ಮಾಡಿದರು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಚಿತ್ರ. ಅದಿತಿ ಪ್ರಭುದೇವ ಇನ್ವೆಸ್ಟಿಕೇಶನ್ ಆಫಿಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕ ಪವನ್ ತೇಜ್ ಕೂಡ ವಿಭಿನ್ನಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೇಘಶ್ರೀ, ನಾಗಾರ್ಜುನ, ಹನುಮಂತೇಗೌಡ, ರಂಜಿತ್, ನವೀನ್ ಪಡೀಲ್ ಹಾಗೂ ಸಾಕಷ್ಟು ಕಿರುತೆರೆ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ನಲವತ್ತೈದು ದಿನಗಳ ಒಂದೇ ಹಂತದ ಚಿತ್ರೀಕರಣ ಮೈಸೂರು, ರಾಜಸ್ಥಾನ್ ಮುಂತಾದ ಕಡೆ ನಡೆಯಲಿದೆ. ನಾಲ್ಕು ಹಾಡುಗಳಿದ್ದು, ಪ್ರವೀಣ್ ಸಂಗೀತ ನೀಡಲಿದ್ದಾರೆ. ಸಾಯಿಸತೀಶ್ ಈ ಚಿತ್ರದ ಛಾಯಾಗ್ರಹಕರು. ಮಾಸ್ ಮಾದ, ವಿಕ್ರಮ್ ಮೋರ್ ಸಾಹಸ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ ಎಂದು ನಿರ್ದೇಶಕ ಜೀವ ನೂತನ ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ಈ ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ. ನಿರ್ದೇಶಕ ಜೀವ ಅವರು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಮೊದಲ ನಿರ್ಮಾಣದ ಚಿತ್ರವಾದರೂ, ಯಾವುದಕ್ಕೂ ಕಡಿಮೆ ಇಲ್ಲದ ಹಾಗೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ನಿರ್ಮಾಪಕ ವಿ.ಚಂದ್ರು. ಅದತಿ ಪ್ರಭುದೇವ ಅವರಂತಹ ನಟಿಯೊಂದಿಗೆ ಅಭಿನಯಿಸುತ್ತಿರುವುದು ಸಂತಸ ತಂದಿದೆ ಎಂದು ನಾಯಕ ಪವನ್ ತೇಜ್ ಚಿತ್ರದ ಕುರಿತಾಗಿ ಮಾತನಾಡಿದರು. ನಿರ್ದೇಶಕ ಜೀವ ಅವರು ಹೇಳಿದ ಕಥೆ ಇಷ್ಟವಾಯಿತು. ಒಂದೇ ಹಂತದಲ್ಲಿ ಈ ಚಿತ್ರೀಕರಣ ನಡೆಯಲಿದೆ. ಮುಂಚಿನಿಂದಲೂ ನನಗೆ ಈ ತರಹ ಪಾತ್ರ ಮಾಡಬೇಕೆಂದು ಆಸೆಯಿತ್ತು.
ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೀನಿ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡುತ್ತಿರುವ ಖುಷಿಯಿದೆ ಎಂದರು ನಾಯಕಿ ಅದಿತಿ ಪ್ರಭುದೇವ. ಭುವನೇಶ್ ಪ್ರೊಡಕ್ಷನ್ಸ್ ಮೂಲಕ ಬೆಂಗಳೂರಿನ ಉದ್ಯಮಿ ವಿ.ಚಂದ್ರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ಮಾಣದ ಚಿತ್ರ. ಕೇಶವನ್ ಸಂಕಲನ, ಸಂತು - ಮದನ್ ಹರಿಣಿ ನೃತ್ಯ ನಿರ್ದೇಶನ ಹಾಗೂ ಮೈಸೂರು ಕೃಷ್ಣ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.
Recent comments