ಶಬ್ದರಹಿತ ನಿರೂಪಣೆಯ ಗ್ರಾಫಿಕ್ ಪುಸ್ತಕ 'ಸಮ್ಮರ್ಸ್ ಚಿಲ್ಡ್ರನ್'
ಶಬ್ದರಹಿತ ನಿರೂಪಣೆಯ ಗ್ರಾಫಿಕ್ ಪುಸ್ತಕ 'ಸಮ್ಮರ್ಸ್ ಚಿಲ್ಡ್ರನ್'
ಬೆಂಗಳೂರು: ಖ್ಯಾತ ಕಲಾವಿದೆ ಅನ್ಪು ವರ್ಕಿ ಅವರು ತಮ್ಮ ಎರಡನೆಯ "ಸಮ್ಮರ್ಸ್ ಚಿಲ್ಡ್ರನ್" ಎಂಬ ಶಬ್ದರಹಿತ ನಿರೂಪಣೆಯ ಗ್ರಾಫಿಕ್ ಪುಸ್ತಕ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಕೇರಳದ ರಬ್ಬರ್ ತೋಟದ ಅಂತರಂಗದ ಲೋಕದಲ್ಲಿ ಕಳೆದ, ಈಗ ಮರೆತುಹೋಗಿರುವ ಸ್ಥಳ ಮತ್ತು ಬಾಲ್ಯದ ನೆನಪಿನಲ್ಲಿ ರಚಿಸಿರುವ ಪುಸ್ತಕ ಸಮ್ಮರ್ಸ್ ಚಿಲ್ಡ್ರನ್. ನೆನಪು ಮತ್ತು ನಷ್ಟಗಳ ಮೇಲೆ ಆಧಾರಿತವಾದ ಈ ಪುಸ್ತಕವು ವಿಶಿಷ್ಟವಾಗಿ ಶಬ್ದರಹಿತ ನಿರೂಪಣೆಯ ಮೂಲಕ ಚಿತ್ರಗಳ ರೂಪದಲ್ಲಿ ಇಬ್ಬರು ಒಡಹುಟ್ಟಿದ ಮಕ್ಕಳು ಕಳೆದ ಒಂದು ಬೇಸಿಗೆಯ ದಿನವನ್ನು ಬಣ್ಣಿಸುತ್ತದೆ. ಒಬ್ಬರನ್ನು ಇನ್ನೊಬ್ಬರು ಹಿಂಬಾಲಿಸುತ್ತ ಇಬ್ಬರೂ ಒಂದೇ ಜೀವದಂತೆ ಕಳೆವ ದಿನವನ್ನು ಕಲಾವಿದೆ ಅನ್ಪು ವರ್ಕಿಯವರು ದಕ್ಷವಾಗಿ ನಿರೂಪಿಸಿದ್ದಾರೆ. ಈ ನಿರೂಪಣೆಯ ಇನ್ನೊಂದು ವೈಶಿಷ್ಟ್ಯವೇನೆಂದರೆ ಪುಸ್ತಕದುದ್ದಕ್ಕೂ ಮಕ್ಕಳು ಹುಡುಗರೋ ಹುಡುಗಿಯರೋ ಎಂದು ಪಕ್ಕನೆ ತಿಳುವಳಿಕೆಗೆ ಬಾರದಿರುವುದು.
ಮುಂಗಾರಿನ ಸಮಯದಲ್ಲಿ ದಟ್ಟವಾದ ಉಷ್ಣವಲಯವಾದ ಕೇರಳದಲ್ಲಿ ನಡೆಯುವ ಕಥೆಯು ಅದ್ಭುತವಾಗಿ ನೆನಪಿನ ಬುತ್ತಿಯನ್ನು ಬಿಚ್ಚಿಡುತ್ತದೆ. ಸಮ್ಮರ್ಸ್ ಚಿಲ್ಡ್ರನ್ ಅನ್ಪು ವರ್ಕಿಯವರ ಎರಡನೆಯ ಸ್ವಯಂ ಪ್ರಕಟಿತ ಗ್ರಾಫಿಕ್ ಪುಸ್ತಕವಾಗಿದ್ದು 2014ರಲ್ಲಿ ಪ್ರಕಟವಾದ ‘ಜಬಾ’ ಅವರ ಮೊದಲ ಪುಸ್ತಕವಾಗಿದೆ. ಸಮ್ಮರ್ಸ್ ಚಿಲ್ಡ್ರನ್ ಪುಸ್ತಕ ರಚಿಸಲು ಮೂರು ವರ್ಷ ತೆಗೆದುಕೊಂಡಿರುವ ಕಲಾವಿದರು ಪುಸ್ತಕವನ್ನು ಸೇಪಿಯಾ ಬಣ್ಣದ ಪುಟಗಳಂತೆ ತೋರಿಸಲು ಪಾಯಿಂಟಿಲಿಸ್ಟಿಕ್ ವಿಧಾನದಲ್ಲಿ ರೆಂಡರ್ ಮಾಡಲಾಗಿದೆ. ಅನ್ಪುವರ್ಕಿ ಅವರ ಕುರಿತು: ಅನ್ಪು ವರ್ಕಿ ಅವರು ವರ್ಣಚಿತ್ರಕಾರ್ತಿ, ಮ್ಯೂರಲಿಸ್ಟ್ ಮತ್ತು ಕಾಮಿಕ್ ಕಲಾವಿದರಾಗಿದ್ದಾರೆ. ಬರೋಡಾ ಮತ್ತು ಲಂಡನ್ನಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು 2008ರಲ್ಲಿ ನ್ಯೂಯೊರ್ಕಿನಲ್ಲಿ ತಮ್ಮ ಮೊದಲ ಏಕವ್ಯಕ್ತಿ ಪ್ರದರ್ಶನ ನೀಡಿದ್ದರು.
ಜರ್ಮನಿಯ ಬ್ರೆಮೆನಿನಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಸ್ಟ್ರೀಟ್ ಆರ್ಟ್ ಪ್ರಯತ್ನಿಸಿದ ಅವರು ದೇಶವಿದೇಶಗಳಲ್ಲಿ ತಮ್ಮ ಕಲೆ ಪ್ರದರ್ಶಿಸಿದ್ದಾರೆ. ಅನ್ಪು ವರ್ಕಿ ಅವರು ಭಾರತದಲ್ಲಿ ಹಲವಾರು ಬೀದಿ ಕಲಾ ಉತ್ಸವಗಳನ್ನು ಆಯೋಜಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅಲ್ಲದೆ 2011ರಿಂದ ಸ್ಮಾರಕ ಕಲಾಕೃತಿಗಳು, ಭಿತ್ತಿಚಿತ್ರಗಳನ್ನು ರಚಿಸುತ್ತಿದ್ದಾರೆ. ಅವರ ಮೊದಲ ಗ್ರಾಫಿಕ್ ಪುಸ್ತಕವಾದ 'ಜಬಾ'ವು ಅವರ ಒಡನಾಡಿ ಬೆಕ್ಕಿನ ಜೀವನದಲ್ಲಿ ಒಂದು ದಿನದ ಸುತ್ತ ನಿರೂಪಿತವಾಗಿದೆ. ತನ್ನ ನೂತನ ಪುಸ್ತಕವನ್ನು ಶಾಂತಿನಗರದ 'ದಿ ಕೋರ್ಟ್ಯಾರ್ಡ್'ನಲ್ಲಿ ಬಿಡುಗಡೆ ಮಾಡಲು ಅನ್ಪು ವರ್ಕಿ ಅವರು ಸಿದ್ಧತೆ ನಡೆಸಿದ್ದಾರೆ.ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಕಾಮಿಕ್ ಕಲಾವಿದ ಮತ್ತು ಚಲನಚಿತ್ರ ನಿರ್ದೇಶಕರಾದ ಭಾರತ್ ಮೂರ್ತಿ ಅವರೊಂದಿಗೆ ಪುಸ್ತಕದ ಕುರಿತು ಚರ್ಚೆ ನಡೆಯಲಿದೆ.
Recent comments