ಕಂಠೀರವ ಸ್ಟುಡಿಯೋದಲ್ಲಿ "ಓರಿಯೋ"* *ಚಿತ್ರಕ್ಕೆ ಚಾಲನೆ .
ಕಂಠೀರವ ಸ್ಟುಡಿಯೋದಲ್ಲಿ "ಓರಿಯೋ"* *ಚಿತ್ರಕ್ಕೆ ಚಾಲನೆ .
ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ "ಓರಿಯೋ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಸದಸ್ಯರಾದ ಮಂಜುನಾಥ್ ಆರಂಭಫಲಕ ತೋರಿದರು. ಮಾಜಿ ನಗರ ಪಾಲಿಕೆ ಸದಸ್ಯರಾದ ಕೆ.ಮುನಿರಾಜು ಕ್ಯಾಮೆರಾ ಚಾಲನೆ ಮಾಡಿದರು.
ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಇಂದಿಗೆ ಅಪ್ಪು ಅವರು ನಮ್ಮನ್ನು ಅಗಲಿ ಒಂದು ತಿಂಗಳಾಯಿತು. ಆದರೂ ದು:ಖ ಕಡಿಮೆಯಾಗಿಲ್ಲ. ಅವರಿಗೆ ನಮ್ಮ ನಮನ ಎಂದು ಮಾತು ಆರಂಭಿಸಿದರು ನಿರ್ದೇಶಕ ನಂದನ್ ಪ್ರಭು. ನಾನು ಈ ಹಿಂದೆ 'ಪ್ರೀತಿಯ ಲೋಕ' ಹಾಗೂ 'ಲವ್ ಇಸ್ ಪಾಯಸನ್' ಚಿತ್ರಗಳನ್ನು ನಿರ್ದೇಶಿಸಿದ್ದೆ. ಆರು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿ ಬಂದಿದ್ದಿನಿ. ನಾನು ನಿರ್ದೇಶನಕ್ಕೆ ಬರುವ ಮೊದಲು ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ(ರಾಷ್ಟ್ರಪತಿ ಆಗುವುದಕ್ಕಿಂತ ಮುಂಚೆ) ಅವರ ಕಾರಿಗೆ ಚಾಲಕನಾಗಿದ್ದೆ. ಅವರು ನನ್ನೊಂದಿಗೆ ಆಡುತ್ತಿದ್ದ ಮಾತುಗಳು ಈ ಕಥೆಗೆ ಸ್ಪೂರ್ತಿ.
"ಓರಿಯೋ" ಪದಕ್ಕೆ ಒಂದೊಂದು ದೇಶದಲ್ಲಿ ಒಂದೊಂದು ಹೆಸರಿದೆ. ಭಾರತದಲ್ಲಿ ಆ ಹೆಸರಿನ ಬಿಸ್ಕೆಟ್ ಸಹ ಇದೆ ಎಂದು ವಿವರಣೆ ನೀಡಿದರು. ನಾವು ಎಚ್ಚರ ತಪ್ಪಿದರೆ, ಮುಂದೊಂದು ದಿನ ಹೀಗೂ ಆಗಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡುವ ವಿಭಿನ್ನ ಕಥಾಹಂದರ "ಓರಿಯೋ" ಚಿತ್ರದಲ್ಲಿದೆ ಎನ್ನುತ್ತಾರೆ ನಂದನ್ ಪ್ರಭು. ನಾನು ಮೂಲತಃ ಆರ್ಕಿಟೆಕ್ಟ್. ಇದು ನನ್ನ ಮೊದಲ ಚಿತ್ರ. ಪಾತ್ರ ಚೆನ್ನಾಗಿದೆ. ಅವಕಾಶ ನೀಡಿದ್ದ ನಂದನ್ ಪ್ರಭು ಅವರಿಗೆ ಧನ್ಯವಾದ ಎಂದರು ಪ್ರಮುಖ ಪಾತ್ರಧಾರಿ ನಿತಿನ್ ಗೌಡ. ನಾನು "ರಥಾವರ" ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದೇನೆ. ವೈರ ಹಾಗೂ ಪುಟಾಣಿ ಪಂಟರ್ ಚಿತ್ರಗಳಲ್ಲೂ ಅಭಿನಯಿಸಿದ್ದೇನೆ. ಈ ಚಿತ್ರದಲ್ಲಿ ಉತ್ತಮ ಪಾತ್ರ ನೀಡಿರುವ ನಿರ್ದೇಶಕರಿಗೆ ವಂದನೆಮಾತನಾಡಿದರು ನಟ ಸುಚಿತ್. ನಟಿಯರಾದ ಶುಭಿ, ಲತಾ ಹಾಗೂ ಸಂಗೀತ ನಿರ್ದೇಶಕ ಸಾಯಿಕಿರಣ್ ಚಿತ್ರದ ಬಗ್ಗೆ ಮಾತನಾಡಿದರು.
ಡಿಸೆಂಬರ್ 1 ರಿಂದ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಶಿವಾಂಜನೇಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಜಯಶ್ರೀ ಆರ್ ಎಂ ಹಾಗೂ ವೈಶಾಲಿ.ವೈ.ಜೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಟಿ.ಕೃಷ್ಣಪ್ಪ ಹಾಗೂ ರೇಣುಕಾ ಪ್ರಭಾಕರ್ ಈ ಚಿತ್ರದ ಸಹ ನಿರ್ಮಾಪಕರು. ಸಂಭಾಷಣೆ ಹಾಗೂ ಸಹ ನಿರ್ದೇಶನ ಬಿ.ರಾಜರತ್ನ ಅವರದು. ಬ್ಯಾಟಪ್ಪ ಗೌಡ ಛಾಯಾಗ್ರಹಣ, ಸಾಯಿಕಿರಣ್ ಸಂಗೀತ ನಿರ್ದೇಶನ, ಶ್ರೀನಿವಾಸ್ ಪಿ ಬಾಬು ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಜೈ ಹರಿಕೃಷ್ಣ ಅವರ ನೃತ್ಯ ನಿರ್ದೇಶನ "ಓರಿಯೋ" ಚಿತ್ರಕ್ಕಿದೆ. .
Recent comments