ದೀದಿ ನಾಡಲ್ಲಿ ‘ಪೌರತ್ವ’ ಕಿಡಿ ಹೊತ್ತಿ ಉರಿದ ಪಶ್ಚಿಮ ಬಂಗಾಳ
ದೀದಿ ನಾಡಲ್ಲಿ ‘ಪೌರತ್ವ’ ಕಿಡಿ ಹೊತ್ತಿ ಉರಿದ ಪಶ್ಚಿಮ ಬಂಗಾಳ
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ ಇದೀಗ ಪಶ್ಚಿಮ ಬಂಗಾಳಕ್ಕೂ ವ್ಯಾಪಿಸಿದ್ದು, ಮುರ್ಷಿದಾಬಾದ್ ಮತ್ತು ಹೌರಾ ಜಿಲ್ಲೆಯಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದೆ. ಪ್ರತಿಭಟನಾಕಾರರು ಲಾಲ್ಗೋಲಾ ರೈಲು ನಿಲ್ದಾಣಕ್ಕೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಹೋರಾಟಗಾರರ ಕಿಚ್ಚಿಗೆ ರೈಲು ನಿಲ್ದಾಣದಲ್ಲಿ ನಿಂತಿದ್ದ 5 ಖಾಲಿ ರೈಲುಗಳು ಭಸ್ಮವಾಗಿವೆ. ಪಶ್ಚಿಮ ಬಂಗಾಳದ ಹಲವೆಡೆ ಹೋರಾಟ ತೀವ್ರಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಹೆದ್ದಾರಿ ಮತ್ತು ರೈಲು ಸಂಚಾರ ರದ್ದುಗೊಂಡಿದೆ. ಹೌರಾದ ಸಂಕ್ರೇಲ್ ರೈಲು ನಿಲ್ದಾಣದಲ್ಲಿ ಹೋರಾಟಗಾರರು ದಾಂಧಲೆ ನಡೆಸಿ ಟಿಕೆಟ್ ಕೌಂಟರ್ ಮತ್ತು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಾಕಿದ್ದಾರೆ. ತಡೆಯಲು ಯತ್ನಿಸಿದ ರೈಲ್ವೆ ಭದ್ರತಾ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನೂ ಬಂದ್ ಮಾಡಿದ್ದಾರೆ. ಹೋರಾಟಗಾರರ ಕಿಚ್ಚಿಗೆ 5 ರೈಲ್ವೆ ನಿಲ್ದಾಣಕ್ಕೆ ಬೆಂಕಿ ಭಸ್ಮಾಯ್ತು 15 ಬಸ್ಗಳು, ಪ್ರಯಾಣಿಕರು ಪಾರು ಪಶ್ಚಿಮ ಬಂಗಾಳದಲ್ಲಿ ಹೋರಾಟಗಾರರ ಕಿಚ್ಚಿಗೆ ಇಂದು ಒಟ್ಟು 5 ರೈಲು ನಿಲ್ದಾಣಗಳು ತುತ್ತಾಗಿವೆ. ಅಲ್ಲದೆ, ಮೂರು ರಾಜ್ಯ ಸಾರಿಗೆ ಬಸ್ ಸೇರಿದಂತೆ 15 ಬಸ್ ಧಗಧಗಿಸಿವೆ.
ಪ್ರಯಾಣಿಕರನ್ನು ಹೊರಗೆಳೆದು ಬಸ್ಗಳಿಗೆ ಬೆಂಕಿ ಹಚ್ಚಲಾಗಿದೆ. ಪಶ್ಚಿಮ ಬಂಗಾಳದ ಉತ್ತರ ಮತ್ತು ದಕ್ಷಿಣ ಭಾಗ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ- 34ರ ಸಂಚಾರಕ್ಕೆ ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಮುರ್ಷಿದಾಬಾದ್ನಲ್ಲಿ ತಡೆಯೊಡ್ಡಲಾಗಿದೆ. ಅಲ್ಲದೆ, ಇದೇ ಜಿಲ್ಲೆಯಲ್ಲಿನ ಹಲವು ರಸ್ತೆಗಳನ್ನೂ ತಡೆಯಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಇಂದು 20 ರೈಲು ಸಂಚಾರ ರದ್ದು ಮಾಡಲಾಗಿದೆ. 22ಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆ ತೀವ್ರವಾಗ್ತಿದಂತೆ ಸಿಎಂ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಜಗ್ದೀಪ್ ಧನ್ಕರ್, ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ದಾಂಧಲೆ ಎಬ್ಬಿಸುವವರ ಹಾಗೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಮಮತಾ ಎಚ್ಚರಿಕೆ ನೀಡಿದರು. ಇದಕ್ಕೆ ಕೇರ್ ಮಾಡದ ಹೋರಾಟಗಾರರು ಮಧ್ಯಾಹ್ನದ ನಂತರ ಹೋರಾಟ ಮತ್ತಷ್ಟು ತೀವ್ರಗೊಳಿಸಿದರು. ಮುಂಬೈ-ಕೋಲ್ಕತ್ತಾ ಹೆದ್ದಾರಿ ಮತ್ತು ಮುಂಬೈ-ದೆಹಲಿ ಹೆದ್ದಾರಿ ಮಧ್ಯೆ ಸಂಪರ್ಕ ಕಲ್ಪಿಸುವ ಕೋನಾ ಎಕ್ಸ್ಪ್ರೆಸ್ ಹೆದ್ದಾರಿಗೆ ಇಳಿದು, ವಾಹನಗಳನ್ನು ತಡೆದರು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಮುಂದಾದಾಗ ಕಲ್ಲು ತೂರಾಟ ನಡೆಯಿತು.
ಪ್ರತಿಯಾಗಿ ಪೊಲೀಸರು ಶ್ರುವಾಯು ಷೆಲ್ ಸಿಡಿಸಿದರು. ಇದರಿಂದ ರೊಚ್ಚಿಗೆದ್ದ ಪ್ರತಿಭಟನಕಾರರು ಹೆದ್ದಾರಿಯಲ್ಲಿ ನಿಂತಿದ್ದ ಬಸ್ಗಳಿಗೆ ಬೆಂಕಿ ಹಚ್ಚಿದರು. ಇದರಿಂದ 15ಕ್ಕೂ ಹೆಚ್ಚು ಬಸ್ಗಳು ಧಗಧಗಿಸಿದವು. ಯಾವುದೇ ಕಾರಣಕ್ಕೂ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ಜಾರಿಗೆ ತರುವುದಿಲ್ಲ. ಪ್ರತಿಭಟನೆ ನಿಲ್ಲಿಸಿ ಅಂತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ. ದೀದಿಗೆ ಕೌಂಟರ್ ಕೊಟ್ಟ ಬಂಗಾಳದ ಬಿಜೆಪಿ ಅಧ್ಯಕ್ಷ ದೀದಿಗೆ ಕೌಂಟರ್ ಕೊಟ್ಟಿರುವ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಪಶ್ಚಿಮ ಬಂಗಾಳದಲ್ಲಿಯೇ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುತ್ತೇವೆ. ಮಮತಾ ಬ್ಯಾನರ್ಜಿಗೆ ಈ ಕಾಯ್ದೆ ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದ್ದು, ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಇತ್ತ, ವಿರೋಧ ಪಕ್ಷಗಳ ವಿರೋಧಕ್ಕೆ ಟಾಂಗ್ ಕೊಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪೌರತ್ವ ತಿದ್ದುಪಡಿ ಕಾಯ್ದೆ ಬಳಿಕ ಕಾಂಗ್ರೆಸ್ಗೆ ಹೊಟ್ಟೆನೋವು ಶುರುವಾಗಿದೆ ಎಂದು ಲೇವಡಿ ಮಾಡಿದ್ದಾರೆ. ಈಶಾನ್ಯ ರಾಜ್ಯಗಳ ಸಂಸ್ಕೃತಿ, ಸಾಮಾಜಿಕ ಅಸ್ಮಿತೆ, ಭಾಷೆ ಮತ್ತು ರಾಜಕೀಯ ಹಕ್ಕುಗಳಿಗೆ ನಾವು ಭಂಗ ತರುವುದಿಲ್ಲ. ಬದಲಾಗಿ ರಕ್ಷಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಹೋರಾಟದಿಂದ ಈಶಾನ್ಯ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾಯ್ದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆಯುತ್ತಿದ್ದಂತೆ ಅಸ್ಸಾಂನಲ್ಲಿ ಪ್ರತಿಭಟನೆಗಳು ಆರಂಭವಾಗಿದ್ದು, ಕರ್ಫ್ಯೂ ಜಾರಿ ಮಾಡಿ ನಿಯಂತ್ರಣಕ್ಕೆ ತರಲು ಯತ್ನಿಸಿದರೂ ಸಾಧ್ಯವಾಗಿಲ್ಲ.
ಬಿಜೆಪಿ ಆಡಳಿತವಿರುವ ಅಸ್ಸಾಂ ಮತ್ತು ಮೇಘಾಲಯದಲ್ಲಿ ಬಾಂಗ್ಲಾ, ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನದಿಂದ ಬರುವ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವ ಕಾಯ್ದೆ ವಿರೋಧಿಸಿ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಹಿಂಸಾಚಾರಕ್ಕೆ ಕಾರಣವಾಗಿದೆ. ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದರಿಂದ ಅಸ್ಸಾಂನ ಗುವಾಹಟಿಯಲ್ಲಿ ಕಳೆದ ಗುರುವಾರ ವಿಧಿಸಲಾಗಿದ್ದ ಕರ್ಫ್ಯೂ ಇಂದು ಸಡಿಲಿಸಲಾಗಿತ್ತು. ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ರಿಯಾಯಿತಿ ನೀಡಲಾಗಿತ್ತು. ನಾಗಾಲ್ಯಾಂಡ್ನಲ್ಲಿ ನಾಗ ವಿದ್ಯಾರ್ಥಿ ಫೆಡರೇಷನ್ ಆರು ಗಂಟೆಗಳ ಬಂದ್ಗೆ ಕರೆ ನೀಡಿದ್ದರಿಂದ ಶಾಲೆ ಮತ್ತು ಕಾಲೇಜು ಮುಚ್ಚಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಮತ್ತು ವದಂತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೋಮವಾರದವರಿಗೆ ಅಸ್ಸಾಂನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ ಮುಂದುವರಿಸಲಾಗಿದೆ.
Recent comments